ಶನಿವಾರ, ಸೆಪ್ಟೆಂಬರ್ 7, 2013

ನಾನು ಹಾಗೂ ನನ್ನ ಗುರುಗಳು

ಘಟನೆ ೧         
            ಶಿಕ್ಷಕ ದಿನಾಚರಣೆ ಅಂಗವಾಗಿ ನಾನು ಯಾರನ್ನು ನೆನೆಯಲಿ ಪ್ರಾಥಮಿಕ ದಿಂದ ಹಿಡಿದು ಸ್ನಾತಕೋತ್ತರವರೆವಿಗೂ ಎಷ್ಟೋಂದು ಶಿಕ್ಷಕರು ನಮಗೆ ದಾರಿ ತೋರಿಸಿದರು, ತಿದ್ದಿದರು, ಒಂದು ಬಾರಿ ಬಯ್ದು ಹೇಳಿದರೆ ಮತ್ತೊಮ್ಮೆ ಪ್ರೀತಿಯಿಂದ ಹೇಳಿದ್ದು ಕೆಲವೊಮ್ಮೆ ನಮಗಾಗಿಯೇ (ವಿದ್ಯಾರ್ಥಿಗಳಿಗಾಗಿ) ನಿರಶನ ನಿಂತು ನಮ್ಮನ್ನು ನಾವೇ ತೆಗಳುವಿಕೆಯಿಂದ ಕಾಣುವಂತೆ ಮಾಡಿದ ಶಿಕ್ಷಕರು ನಮ್ಮನ್ನು ಸರಿ ದಾರಿಗೆ ತರುವ ಕಾರಣಗಳು ನನಗೆ ಇಂದಿಗೂ  ತಲ್ಲಣ ಉಂಟುಮಾಡುತ್ತವೆ. ನಾನೇನು ಅತ್ಯಂತ ಬುದ್ಧಿವಂತನಾಗಿ ಇಂದು ಶಿಕ್ಷಕರ ಕುರಿತಾಗಿ ಬರೆಯುತ್ತಿದ್ದೇನೆ ಎಂದು ನಾನು ನನ್ನನ್ನು ವ್ಯಕ್ತ ಪಡಿಸಲಿಕ್ಕಾಗಿ ಇಲ್ಲಿ ಬರೆಯುತ್ತಿಲ್ಲ. ಇದು ನನ್ನದೇ ಗುರುಗಳ ಕುರಿತಾಗಿ ನೆನಪಿಸಿಕೊಳ್ಳೋ ರೀತಿ ಎಂದು ತಿಳಿದುಕೊಳ್ಳಿ. ನನ್ನ ನೆನಪಿನಲ್ಲಿ ಇರುವಂತೆ  ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ಗಣೇಶ ಸಾರ್, ನಿರ್ಮಾಲ ಟೀಚರ್, ಶಾಂತಾಬಾಯಿ, ದೊಡ್ಡಮನಿ, ಪರಸಪ್ಪ, ನಾಗಮ್ಮ, ಚಂದ್ರ ಶೇಖರ, ಗಿರಜಾ ,ನಾಗರತ್ನಮ್ಮ  ಹೀಗೆ  ಎಲ್ಲ ಶಿಕ್ಷಕರ ಹೆಸರು ನಮ್ಮ ನೆನಪಿಗೆ ಬರುತ್ತಾ ಅವರೊಂದಿಗೆ ಕಳೆದ ಆ ಶಾಲೆಯ ದಿನಗಳು 'ಅಯ್ಯೋ ನಾನು ಹೇಗೆ ಇರುತ್ತಿದ್ದೇ ... ?' ಎಂದು ಮನದಲ್ಲಿ ಬಂದು ಹೋಗುತ್ತವೆ. ಕೆಲವು ಘಟನೆಗಳು ಎಂದಿಗೂ ಮರೆಯದೇ ಹಾಗೇ ಉಳಿದೇ ಇರುತ್ತವೆ. ನಾನು ನನ್ನ ತಂಗಿ ಜೊತೆಯಾಗಿ ಶಾಲೆಗೆ ಹೋಗುತ್ತಿದ್ದೇವು. ಆಗ ಎರಡು ಅಂತಸ್ತಿನ ನಮ್ಮ ಶಾಲೆ ಐಸ್ ಲ್ಯಾಂಡ್ ನ ಎದುರುಗಡೆ ದೊಡ್ಡದಾಗಿ ಕಾಣುತ್ತಿತ್ತು. ಶಾಲೆ ಬಿಟ್ಟಾಗ ಮತ್ತು  ಪ್ರಾರಂಭವಾಗುವಾಗ ಆ ರಸ್ತೆ ಟ್ರಾಫಿಕ್ ಜಾಮ್ ಆಗಿ ಹೋಗುತ್ತಿತ್ತು. ಕಾರಣ ನಮ್ಮ ಶಾಲೆಯ ಹಿಂದುಗಡೆಯೇ ಬಸ್ ನಿಲ್ದಾಣ. ಶಾಲೆಯ ಮೊದಲ ಅಂತಸ್ತಿಗೆ ಹೋದರೆ ಬಸ್ ನಿಲ್ದಾಣದ ಎಲ್ಲ ಚಿತ್ರಣ ನಮ್ಮ ಕಣ್ಣೆದುರಿನಲ್ಲಿಯೇ ಕಾಣುತ್ತಿತ್ತು. 

                                 ಕಬ್ಬಿನ ಲಾರಿ, ಬಂಡಿಗಳಿಗೆ ಓಡಿ ಹೋಗಿ ಕಬ್ಬು ಕಿತ್ತಿದ್ದು ಎಲ್ಲಿಂದಲೋ ನೋಡಿದ ಶಿಕ್ಷಕರ ಕೈಯಿಂದ ಕಬ್ಬಿನಂತೆ ಸರಿಯಾಗಿಯೇ ತಿನ್ನುತ್ತಿದ್ದೇವು. ಕೆಲವೊಮ್ಮೆ ಅವರೇ ಕಬ್ಬಿನ ಗನಿಗಳನ್ನು ನೀಡುತ್ತಿದ್ದರು.  ಶಿಕ್ಷಕರು ಎಂದು ನಮ್ಮನ್ನು ಶತ್ರುಗಳಂತೆ ಕಾಣುತ್ತಿರಲಿಲ್ಲ ಕಾರಣ ನಮಗೆ ಅಂದು ಯಾಕೆ ಎಂದು ಅರ್ಥನೂ ಮಾಡಿಕೊಳ್ಳುವಂಥ ಜ್ಞಾನ ನಮ್ಮಲ್ಲಿ ಇರಲಿಲ್ಲ. ನಾಲ್ಕೋ - ಐದೋ ನೆನಪಿಲ್ಲ  ಒಮ್ಮೆ ಹಬ್ಬ ಕಳೆದ ಮರುದಿನ ನಾನು ಶಾಲೆಗೆ ಕರಿಗಡಬು ತೆಗೆದುಕೊಂಡು ಹೋಗಿದ್ದೆ. ಊಟಕ್ಕೆ ಅದನ್ನೇ ತಿನ್ನೋ ಯೋಚನೆ. ನನಗೆ ಸಿಹಿ ಪದಾರ್ಥಗಳೆಂದರೆ ತುಂಬಾ ಇಷ್ಟ. ಅಮ್ಮ ಮನೆಯಲ್ಲಿ ಮಾಡಿದ ಬುಟ್ಟಿಯ ತುಂಬಾ ಇದ್ದದ್ದನ್ನು ಪೂಜೆಯ ನಂತರ ನಮ್ಮ ಮನೆಯ ಸುತ್ತಾ-ಮುತ್ತಾ ಇರುವರಿಗೆಲ್ಲ ನೀಡುತ್ತಿದ್ದಾಗ ನನಗೆ ಸಹಿಸದಷ್ಟು ಕೋಪ ಬರುತ್ತಿತ್ತು. ನಾವು ಯಾಕೆ ನೆರೆಯವರಿಗೆ ನೀಡಬೇಕು ಎಂದು ಅನ್ನಿಸುತ್ತಿತ್ತು. ಆ ವಯಸ್ಸಿನಲ್ಲಿ ಅದು ಸಹಜವೂ ಆಗಿತ್ತು. ಸರಿ ನನ್ನ ಶಾಲೆಗೆ ಕರಿಗಡಬು ತೆಗೆದುಕೊಡು ಹೋದ ಸುದ್ದಿಯನ್ನು ನಾನು ನನ್ನ ಗೆಳೆಯರಾದ ಎರ್ರಿಸ್ವಾಮಿ, ವೆಂಕಟೇಶನಿಗೆ ಮಾತ್ರ ಗೊತ್ತಿತ್ತು. ಪಾಠ ಮಾಡುವ ಶಿಕ್ಷಕರ ಬೋರ್ಡಿನ ಕೆಳಗೆ ಇದ್ದ ಬೆಂಚಿನ ಅಡಿಯಲ್ಲಿ ನಮ್ಮೆಲ್ಲರ ಊಟದ ಬುತ್ತಿ ಇಡುತ್ತಿದ್ದೇವು. ಅಂದು ನನ್ನ ನೋಟವೆಲ್ಲ ಆ ನನ್ನ ಪೇಪರ್ ನಲ್ಲಿ ಸುತ್ತಿದ್ದ ಕರಿಗಡಬು ಕಣ್ಣಿಂದ ದೂರ ಸರಿಯದಂತೆ ಇದ್ದವು. ಆದರೆ ದೊಡ್ಡಮನಿ ಸಾರ್ ಎಂದರೇ ನನಗೆ ಎಲ್ಲಿಲ್ಲದ ಭಯ ಆ ಕಾರಣದಿಂದಾಗಿ ನಾನು ಪಾಠದ ಕಡೇ ಲಕ್ಷ್ಯ ಕೊಟ್ಟು ಕುಳಿತ್ತಿದ್ದೆ. ಹಾಗೇ ಅವರು ಕೊಟ್ಟ ಮನೆ ಪಾಠವನ್ನು ಅಲ್ಲಿಯೇ ಮಾಡಿ ಮುಗಿಸಿ ಬಿಡುತ್ತಿದ್ದೆ. 

                              ಅಂದು ನನ್ನ ಪೊಟ್ಟಣದ ಮೇಲೆ ಕಣ್ಣು  ಇಡಲು ನಾನು ಆ ನನ್ನ ಇಬ್ಬರು ಗೆಳೆಯರಿಗೂ ಹೇಳಿದ್ದೆ. ಕಾರಣ ಅವರಿಗೂ ಅರ್ಧ ನೀಡುತ್ತೇನೆ ಎಂದು ಭರವಸೆ ನೀಡಿದ್ದೆ. ಆದರೆ ನಮ್ಮ ದೊಡ್ಡಮನಿ ಸಾರ್ ಪಾಠದ ಮುಂದೆ ನನ್ನ ತಿನ್ನುವ ಮನಸ್ಸು ಕಡೇ ಮರೆತು ಓದುವದರತ್ತ ಸರೆದಿದ್ದು ನನಗೆ ತಿಳಿಯದಾಗಿತ್ತು. ಒಂದು ಭಯ ಮತ್ತೊಂದು ಇರಲಿಕ್ಕಿಲ್ಲ ಕಾರಣ ನನಗೆ ಓದು ಎಷ್ಟೇ ಓದಿದರೂ ಅಷ್ಟೇ ಅನ್ನುವ ಮಟ್ಟಿಗೆ ಇದ್ದವನು. ಅತ್ಯಂತ ಬುದ್ದಿವಂತ ಎಂದು ಇಲ್ಲವೇ ಅತ್ಯಂತ ದಡ್ಡನೆಂದೂ ನಾನು ಎರಡರಲ್ಲೂ ಕಾಣಿಸಿ ಕೊಂಡವನಲ್ಲ. ಆದರೆ ಅಂದು ಆ ಸಿಹಿ ಪದಾರ್ಥಗಳ ಮೇಲೆ ನನ್ನ ಹಾಗೂ ನನ್ನ ಗೆಳೆಯರ ಹೆಸರಿರಲಿಲ್ಲ. ಮಧ್ಯಾಹ್ನ ಊಟದ ಹೊತ್ತಿಗೆ ನನ್ನ ಪೊಟ್ಟಣ ಕಾಣೆಯಾಗಿತ್ತು. ನಾನು ತುಂಬಾ ಗೊಂದಲಕ್ಕೆ ಬಿದ್ದೆ. ದುಃಖಿತನಾದೆ. ಆದರೆ ಗೆಳೆಯರಿಂದ ತಿಳಿದಿದ್ದು ನನ್ನ ಆ ಪೊಟ್ಟಣವನ್ನು ಹಾರಿಸಿದ್ದವರು ನನ್ನ ಸಹಪಾಠಿಗಳಾದ ಶಾಂತಾಬಾಯಿ ಮತ್ತು ಗೀತಾಬಾಯಿಯೆಂದು ತಿಳಿಯಿತು. ಅವರು ಬಸ್ ನಿಲ್ದಾಣದ ಕಡೇ ಹೋಗಿರುವುದನ್ನು ತಿಳಿಸಿದರು. ಇದು ಒಂದು ದೊಡ್ಡ ವಿಷಯವಾಗಿ ಅಂದು ಅಲ್ಲಿ  ಬಿತ್ತರವಾಗಿ, ದೊಡ್ಡಮನಿ ಸಾರ್ ಗೆ ಸುದ್ದಿ ಮುಟ್ಟಿ ಅವರು ವಿಚಾರ ಮಾಡುವ ಹೊತ್ತಿಗೆ ಈ ಇಬ್ಬರ ದರ್ಶನ ಬಸ್ ನಿಲ್ದಾಣದಲ್ಲಿ ಸಾಗುತ್ತಿದ್ದದ್ದು ಕಾಣಿಸಿತು. ಅದು ನನ್ನದೇ ಪೊಟ್ಟಣವೆಂದು ನಾನು ಗುರ್ತಿಸಿದೆ. ಮತ್ತು ಇನ್ನೂ ದುಃಖಿತನಾದೆ. ದೊಡ್ಡಮನಿ ಗುರುಗಳ ನನ್ನನ್ನು ಬಯ್ದು 'ಲೇ ಅದಕ್ಕೆಲ್ಲ ಯಾಕೆ ಯೋಚನೆ ಮಾಡ್ತೀಯಾ, ಸುಮ್ಮನಿರು ಅವರ ಬಂದ ಮೇಲೆ ನಾ ವಿಚಾರ ಮಾಡ್ತೀನಿ' ಎಂದು ಏಳನೇ ತರಗತಿ ವಿದ್ಯಾರ್ಥಿಯ ಕೈಯಲ್ಲಿ ಹತ್ತು ರೂಪಾಯಿಗಳನ್ನು ನೀಡಿ ನನಗೆ ಎರಡು ಇಡ್ಲಿ ತರಲಿಕ್ಕೆ ನೀಡಿದರು. ಆ ನನ್ನ ಇಬ್ಬರೂ ಸಹಪಾಠಿಗಳಿಗೆ ಗುರುಗಳು  ಶಿಕ್ಷೆ ನೀಡಿದ್ದು, ಅವರು ನನ್ನೊಂದಿಗೆ ಎಂದು ಮಾತನಾಡಿದ್ದು ಒಂದು ನನಗೆ ನೆನಪಿನಲ್ಲಿ ಉಳಿದಿಲ್ಲ. 

         ಅಲ್ಲಿಯವರೆವಿಗೂ ನನ್ನಲ್ಲಿ ಮಡುಗಟ್ಟಿದ್ದ ದುಃಖ ಮರೆಯಾಗಿ ಸಾರ್ ಅವರು  ನನಗಾಗಿ ನೀಡಿದ್ದ ಹಣ ನನ್ನನ್ನು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು. ಕಸಿವಿಸಿ ಆಯಿತು ಆದರೂ ಆ ನನ್ನ ಸ್ಥಿತಿ ತೆಗೆದುಕೊಳ್ಳುವಂತೆ ಮಾಡಿತು. ಆ ಎರೆಡು ಇಡ್ಲಿಗಳು ನನ್ನ ಜೀವನದ ಮಹಾ ಪ್ರಸಾದವಾಗಿ ಕಾಣಿಸಿತು. ಎಲ್ಲೋ ಹೋಗಿ ದೇವಸ್ಥಾನಗಳಲ್ಲಿ ಪ್ರಸಾದ ಪಡೆದುಕೊಂಡು ಬರುವಲ್ಲಿ ಇರುವ ಆನಂದಕ್ಕಿಂತ ಹೆಚ್ಚಿನ ಆನಂದ ನನಗೆ ಅಂದು ದೊರಕಿದ್ದು. ಆ ಆನಂದ ನನ್ನ ಜೀವನದ ಪರಮಾನಂದ ಎಂದು ತಿಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ಮತ್ತೇ ಅವರನ್ನು ಕಂಡಿದ್ದು ನಾನು ಶಿಕ್ಷಕನಾಗಿ ಒಂದುವರೆ ವರ್ಷಗಳ ನಂತರ. ಅದಾಗಲೇ ಅವರು ನಿವೃತ್ತಿ ಹೊಂದಿದ್ದರು  ಕುಷ್ಟಗಿಗೆ ನಾನು ಹೊರಡುವ ಬಸ್ ನಲ್ಲಿ ಸಿಟ್ ಗಾಗಿ ಹೊಡುಕುವಾಗ ನಾನೇ ಅವರನ್ನು ಮಧ್ಯದ ಸಿಟ್ ನಲ್ಲಿ ವ್ಯವಸ್ಥೆ ಮಾಡಿಕೊಟ್ಟು ಪರಿಚಯ ಮಾಡಿಕೊಂಡೆ. ಅವರು ತಲೆ ಮೇಲೆ ಕೈ ಇಟ್ಟು ಒಳ್ಳೇದಾಗಲಿ ಎಂದು ಹರಸಿದರು. ನನಗೆ ಮತ್ತೇ ಅವರ ಶಕ್ತಿಯನ್ನು ಧಾರೆ ಎರದಂತೆ ತುಂಬಿ ಹೋದೆ. 

(ತಮಗೆ ನೋವಾದರೆ ಕ್ಷಮೆ ಇರಲಿ ಶಾಂತ/ಗೀತಾ)