ಶನಿವಾರ, ಮೇ 10, 2014

ರಂಗಭೂಮಿಯ ಅವಶ್ಯಕತೆ ೧

          ಹೆಜ್ಜೆಗಳ ಮುಖಾಂತರ ನಾನೇನು ಸಾಗುತ್ತಿದ್ದೇನೆ. ಇದು ನಾಟಕ ಶಿಕ್ಷಕನಾಗಿ ನಾನು ನೇಮಕ ಹೊಂದಿದ ನಂತರ ಆದ ಅನುಭವಗಳಿಂದ ಹುಡುಕಿದ ಒಳ ಮಾರ್ಗ. ಆದರೆ ನನಗೆ ನಂತರದಲ್ಲಿ ತಿಳಿದಿದ್ದು ಈ ಹಾದಿಯು ರಂಗಭೂಮಿಯ ಪೂರಕವಾದದ್ದು ಎಂದು. ಹೈಸ್ಕೂಲ್ ವಿದ್ಯಾರ್ಥಿಗಲಿಗೆ ಪಾಠ ಮಾಡುವಾಗ ನಾನು ನನ್ನನ್ನು ಕಾಣುವೇನೋ ಎಂದು ಹುಡುಕುತ್ತಿದ್ದೆ. ಆದರೆ ಕಷ್ಟ ಅದಕ್ಕೆ ಪೂರಕವಾಗಿ ಬೇಕಾದ ಸಾಕಷ್ಟು ಅಂಶಗಳು ಇಲ್ಲದಿರುವುದು. ಅದು ಒಂದು ವಸ್ತುವಾಗಿ ಕಾಣುವುದಕ್ಕಿಂತ ಒಂದು ವಲಯವಾಗಿ ಸೃಷ್ಟಿಸಬೇಕಾಗಿದೆ. 

  ಬೀದಿ ನಾಟಕ ಮಾಡ್ಕೊಂಡು ಹುಡಗರು ಹಾಳಾದರು ಎಂದು ಎಷ್ಟೋ ಜನ ಯಾಕೆ, ನಮ್ಮ ಮನೆಯಲ್ಲಿ ತಂದೆ,  ಬಂಧು ಬಳಗ ಹೇಳಿದಾಗ ಒಂದು ರೀತಿಯಲ್ಲಿ ನನಗೂ ಅನುಮಾನ ಬಂದದ್ದು ಇದೆ. ಆದ್ರೆ ನನ್ನ ಪಾಠಗಳನ್ನು ನಾಟಕೀಯ ರೀತಿಯಲ್ಲಿ ಅರ್ಥೈಸಿಕೊಂಡು ಕನಿಷ್ಟ ಅಂಕ ಪಡೆದು ಉತ್ತೀರ್ಣನಾಗಿ ಸಾಗುತ್ತಿದ್ದದ್ದು ಸಮಾಧಾನದ ಸಂಗತಿಯಾಗಿತ್ತು. ಅತಿ ಬುದ್ಧಿವಂತನಲ್ಲದ ಮತ್ತು  ಅತ್ಯಂತ ದಡ್ಡನೂ ಅಲ್ಲದವನು ನಾನಗಿದ್ದೆ. ಇಂದಿನ ಮಕ್ಕಳನ್ನೂ ನೋಡಿದಾಗ "ಶಿಕ್ಷಣ"  ಮಕ್ಕಳ ಹಕ್ಕನ್ನೇ ಕಿತ್ತಿಕೊಳ್ಳುತ್ತಿದೆಯೋ ಎಂದೆನಿಸುತ್ತದೆ. ಆ ಮಗುವನ್ನು ಅರ್ಥೈಸಿಕೊಳ್ಳಲು ಮತ್ತು ಆ ಮಗುವಿಗೆ ಅರ್ಥೈಸುವಷ್ಟು ನಮಗೆ (ವಿಷಯ ಶಿಕ್ಷಕರಿಗೆ) ಸಮಯವಿಲ್ಲ. ಇದು ಎಲ್ಲ  ಶಿಕ್ಷಕರಿಗೂ ತಿಳಿದಿರುವಂಥ ವಿಷಯ. ಪ್ರಾಥಮಿಕದಲ್ಲಿ ತರಬೇತಿ, ಗಣತಿ..... ಪ್ರೌಢಶಾಲೆಯಲ್ಲಿ ಪಟ್ಯ ಪೂರೈಸಬೇಕು ಎಂಬ ತರಾತುರಿ. ಹಾಗಾದರೆ ದೊರಕುವ ಕೆಲವೇ ದಿನದ ಅವಧಿಗಳಲ್ಲಿ ಆ ಮಗುವನ್ನು ಗಮನಿಸುವುದಾದರು ಹೇಗೆ...?  ಹೀಗೆ ಸಾಲು ಸಾಲು ಪ್ರಶ್ನೆಗಳು ಸದಾ ಕೆದುಕುತ್ತಲೇ ಇರುತ್ತೆ.  ಒತ್ತಡ ಹಾಕಿದರೆ ಮಕ್ಕಳು ಶಾಲೆಗಳನ್ನೇ ಮರೆತು ಬಿಡುತ್ತಾರೆ.

          ರಂಗಭೂಮಿಯ ಮುಖಾಂತರ ಸೆಳೆಯಲು ನಾನು ಹೊಸ ಮಾರ್ಗಗಳನ್ನು ಸಿದ್ದ ಪಡಿಸಿ ಅದರಂತೆ ಮಕ್ಕಳನ್ನು ಸೆಳೆಯಲು ಪ್ರಯತ್ನವನ್ನು ಮಾಡುತ್ತಿದ್ದೇನೆ. ಮಕ್ಕಳ ಸಮಸ್ಯಯನ್ನು ನಾವು ಶಿಕ್ಷಕರು ಅರ್ಥ ಮಾಡಿಕೊಳ್ಳದಿದ್ದರೆ ಮತ್ತ್ಯಾರೂ ಅರ್ಥ ಮಾಡಿಕೊಳ್ಳುವುದು. ಮಕ್ಕಳಿಗೆ ರಂಗಭೂಮಿ ಅಭಿವ್ಯಕ್ತಿಸಲು ಇರುವ ಸರಳ ಹಾಗೂ ಪ್ರಧಾನವಾದ ಮಾಧ್ಯಮ. ನನಗೆ ನನ್ನ ತರಗತಿಯ ಪಾಠಗಳು ಅರ್ಥವಾಗಿದ್ದು ರಂಗ ಮುಖೇನಾನೇ. ಮಕ್ಕಳನ್ನು ನಾವು ಅವರಿಗೆ ತಕ್ಕ ರೀತಿಯಲ್ಲಿ ಬೋಧಿಸಬೇಕಾಗುತ್ತದೆ. ನಾನು ಮತ್ತೊಬ್ಬರ ಕುರಿತು ಕೇವಲವಾಗಿ ಹೇಳಲು ಪ್ರಯತ್ನಿಸುತ್ತಿಲ್ಲ, ದಾರಿ ನಿಮ್ಮದೇ ಆಗಿದ್ದರೆ ಸುಲುಭವಾಗಿ ಅರ್ಥೈಸಲು ಸಾಧ್ಯ. ಪ್ರಾಥಮಿಕದಲ್ಲಿ ಕೆಲವು ಮಕ್ಕಳು ಬೇಗ ಅರ್ಥ ಮಾಡಿಕೊಳ್ಳಬಹುದು ಇನ್ನೂ ಕೆಲವು ಮಕ್ಕಳು ನಿಧಾನವಾಗಿ ಅರ್ಥೈಸಿಕೊಳ್ಲಬಹುದು. ಆದರೆ ಪಾಲಕರೇ ಆಗಲಿ ಶಿಕ್ಷಕರೇ ಆಗಲಿ ತಾಳ್ಮೆಗೆಡದೆ ಸಣ್ಣ ಬದಲಾವಣೆಯನ್ನು ಅವನಲ್ಲಿ ಮಾಡಲು ಪ್ರಯತ್ನಿಸಿದರೆ, ಖಂಡಿತ ಮುಂದೆ ಅವನಲ್ಲಿ ಆಸಕ್ತಿಯ ಜೊತೆ ಕಲಿಯುವ ಹಂಬಲ ಹೆಚ್ಚಾಗಬಹುದು.

(ಮತ್ತೇ ಸಿಗೋಣ)