ಸೋಮವಾರ, ನವೆಂಬರ್ 25, 2013

ಮಕ್ಕಳ ಹೆಜ್ಜೆಗಳು - ಸಾಕ್ಷ್ಯಚಿತ್ರ

ಮುಖಪುಟ

ಹಿಂಪುಟ


ಮಂಗಳವಾರ, ನವೆಂಬರ್ 19, 2013

ಗುಡದೂರಿನ ಮೊಹರಂ ಹಬ್ಬ


     ಮೊಹರಂ ಹಬ್ಬದಲ್ಲಿ  ನಾನು ನಮ್ಮ ಹೊಸಪೇಟೆಯಲ್ಲಿ ಇದ್ದು ರಾತ್ರಿಯೆಲ್ಲ ಗೆಳೆಯರೊಂದಿಗೆ ಊರಲ್ಲಿ ಎಲ್ಲೆಲ್ಲಿ ದೇವರನ್ನು ಕೂಡಿಸಿದ್ದಾರೆ ಅಲ್ಲೆಲ್ಲ ಹೋಗಿ ನಾಲ್ಕು ಹೆಜ್ಜೆ ಹಾಕಿ ಬರುತ್ತಿದ್ದೆವು. ಹಬ್ಬದ ಹಿನ್ನಲೆಯ ಕುರಿತು ಎಂದಿಗೂ ಗಂಭೀರವಾಗಿ ಆಲೋಚಿಸಿಯೇ ಇರಲಿಲ್ಲ. ರಂಗಭೂಮಿಯಲ್ಲಿ ತೊಡಗಿಕೊಂಡರು ಹಬ್ಬವನ್ನು ನಾನು ಯಾಕೆ ನನ್ನ ದೃಷ್ಟಿಯಲ್ಲಿ ನೋಡಲಿಲ್ಲ ಎಂದು ನನಗೆ ಗೊತ್ತಾಗಲಿಲ್ಲ. ನಮ್ಮ ಉತ್ತರ ಕರ್ನಾಟಕದ ಈ ಭಾಗಗಳೆಲೆಲ್ಲ ಹೆಚ್ಚು ಪ್ರಚಲಿತ ಹಾಗೂ ಹಿಂದೂ - ಮುಸ್ಲಿಂ ಎಂಬ ಬೇದವಿಲ್ಲದೆ ಆಚರಿಸುವ ಈ ಹಬ್ಬದ ಕುರಿತು ನಾವು ನಮ್ಮಲಿಯೇ ಎಂದಿಗೂ ಚರ್ಚಿಸಲಿಲ್ಲ. ಹಿರಿಯರು ಈ ಕುರಿತು ಎಂದಿಗೂ ಹೇಳಲಿಲ್ಲ. ಇಂದು ನಾವೇ ನಮ್ಮನ್ನು ಹುಡುಕಿಕೊಳ್ಳುವಾಗ ಇದೆಲ್ಲ ಯೋಚನೆಗಳು ಸುಳಿಯುತ್ತವೆ.  ನಮ್ಮ ಶಾಲೆಯಲ್ಲಿ ಕೈಗೊಂಡ ಐ.ಎಫ್.ಎ ನ ಕಲಿ-ಕಲಿಸು ವಿಭಾಗದಡಿಯಲ್ಲಿ ಮಕ್ಕಳ ಹೆಜ್ಜೆಗಳು ಜಾನಪದದತ್ತ...  ಯೋಜನೆಯನ್ನು ಹತ್ತು ತಿಂಗಳಗಳ ಕಾಲ ನಡೆಸಿದೆವು. ಮಕ್ಕಳ ಗಮನ ಮುಖ್ಯವಾಗಿ ಹೆಜ್ಜೆಕುಣಿತದಲ್ಲಿತ್ತು. ಹೆಜ್ಜೆ ಕುಣಿತವನ್ನು ಕಲಿಯಲಿಕ್ಕಾಗಿ ಅವರು ಪಟ್ಟ ಶ್ರಮ ನಾವೆಲ್ಲೂ ಪಡೆಯಲಿಕ್ಕೆ ಆಗಲೇ ಇಲ್ಲ ಅಥಾವ ಅಂಥಹ ಅವಕಾಶವೇ ದೊರಕಲಿಲ್ಲ ತಿಳಿಯಲಿಲ್ಲ. ಹಿರಿಯರೆಲ್ಲ ನಮ್ಮ ಮಾತಿಗೆ ಬೆಲೆ ಕೊಟ್ಟು ನಮ್ಮ ವಿದ್ಯಾರ್ಥಿಗಳಿಗೆ ಹೆಜ್ಜೆ ಕುಣಿತವನ್ನು ಕಲಿಸಿ ಕೊಟ್ಟರು. ಹಾಗೆಯೇ ಆಚರಣೆಗಳ ಕುರಿತಾಗಿ ಸೂಕ್ಷ್ಮ ವಿಚಾರಗಳನ್ನು ನಮ್ಮೆಲ್ಲ ಮಕ್ಕಳ ಮುಂದೆ ವಿವರವಾಗಿ ಬಿಚ್ಚಿಟ್ಟಾಗ ಅವರು ದೈವದ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಗೌರವದ ಪರಿಚಯ ನಮಗಾಯಿತು.

gururaj - Moharam
ಮೊಹರಂ  ಹಬ್ಬದ ಕತಲ್ ರಾತ್ರಿ ದಿನ ನಾನು ಜಹಗೀರ ಗುಡದೂರಿನ ಸಂಭ್ರಮವನ್ನು ಕಣ್ತುಂಬಿಕೊಂಡೆ. ಹರಕೆ ತಿರೀಸುವವರು, ದೀಡ್ ನಮಸ್ಕಾರ ಹಾಕುವವರು ಸಕ್ರೆ ಓದಿಸುವವರು, ಮನೆಗೆ -ಊರಿಗೆ ಬಂದ ಅತಿಥಿಗಳಿ ಬಿಡದೇ ಉಣ ಬಡಿಸುವ ಎಲ್ಲದರಲ್ಲೂ ಜನರ ತೊಡಗಿಕೊಳ್ಳುವಿಕೆ ನನಗೆ ಕಣ್ತುಂಬಿಕೊಳ್ಳುವ ರೀತಿಯಲ್ಲಿ ಭಾಸವಾಯಿತು. ಕಾರಣ ನಾನು  ಹಿಂದೆ ಈ ಊರನ್ನು ಇಲ್ಲಿನ ಜನರನ್ನು  ಹೀಗೆ  ಕಂಡಿರಲೇ ಇಲ್ಲ.  ಊರಿನ ಹಿರಿಯ ರಿವಾಯತ್ ಪದಗಳನ್ನು ಯುವಕರಿಗೆ ಹೇಳಿಕೊಡುವ  ಶ್ರೀಯುತ ಕನಕರಾಯ ರೆಡ್ಡಿಯವರು ಹಬ್ಬದ ಕುರಿತು ಹೇಳಿದಂತೆ ಕಳೇ ಕಟ್ಟಿರುವುದು ನನ್ನ ಮುಂದೆ ಇಂದು ಕಾಣಿಸುತ್ತಿತ್ತು. 

ಅಲೆ ಹಬ್ಬ ಬಂದು

ಮೂರು ತಿಂಗಳ ಮುಂಚೆ 

ಬದುಕು ಬಾಳೆವನೆಲ್ಲ ಬಿಡಸಿತ್ತ

ಬದುಕು ಬಾಳೆವನೆಲ್ಲ ಬಿಡಸಿತ್ತ

ತಂದೆ ತಾಯಿಗೆ ಸಿಟ್ಟು ತರಿಸಿತ್ತ

ತಂದೆ ತಾಯಿಗೆ ಸಿಟ್ಟು ತರಿಸಿತ್ತ

ಎಂದು ಪದಗಳನ್ನು ಹಾಡಿ ತಮ್ಮ ಕಾರ್ಯವನ್ನೆಲ್ಲ ಸಮಯಕ್ಕೆ ಸರಿಯಾಗಿ ಮುಗಿಸಿಕೊಂಡು ಬಂದು ಸೇರುವ ಈ ಯುವಕರು ಭಯ, ಭಕ್ತಿ ಹಿಡಿಸಿತು. ಇಂದಿನ ತಲೆಮಾರಿನವರಿಗೆ ಹಿರಿಯರ ಕುರಿತು, ನಂಬಿಕೆಯ ಕುರಿತು ಕಿಂಚಿತ್ತು ಗೌರವವನ್ನು ತೋರಿಸದೆ ಹೋಗುತ್ತಿರುವುದು. ಈ ಸಂಧರ್ಭಗಳಲ್ಲಿ ಸಹಜವಾಗಿಬಿಟ್ಟಿದೆ. ವೈಚಾರಿಕತೆ ಇರಲಿ ಆದರೆ ಇಡೀ ಪುರತನದಿಂದ ಬಂದಿರುವುದನ್ನು ನಾನು ಕಿತ್ತಿ ಹಾಕುತ್ತೇನೆ ಎಂದು ಹೋಗುವುದು ಸರಿಯಲ್ಲ. ಗೌರವಿಸಿ, ಪ್ರೀತಿಸಿ ಇಂಥಹ ಆಚರಣೆ ಪದಗಳು ಕುಣಿತ ಎಲ್ಲವೂ ಮುಂದೊಂದು ದಿನ ಹುಡುಕಿದರು ಸಿಗದಂತೆ ಕಾಣೆಯಾಗಿ ಹೋಗುತ್ತವೆ. ಹಳ್ಳಿಯಲ್ಲಿ ಮಾತ್ರ ಕಾಣುತ್ತಿರುವ ಈ ಆಚರಣೆಗಳು ಮುಂದೆ ಅವು ಇಲ್ಲದಂತೆ ಆಗುವ ಸ್ಥಿತಿ ಬರಬಹುದು.

ಹಬ್ಬವನ್ನು ಎಲ್ಲರೊಂದಿಗೆ ಬೆರೆತು ಆಚರಿಸಿದಾಗ ಮಾತ್ರ ನಮ್ಮದೆನ್ನುವ ಭಾವ ಕಾಣಲು ಸಾಧ್ಯ. ಇಡೀ ರಾತ್ರಿ ಕೂಣಿತವನ್ನು ನೋಡಲೇ ಕುಳಿತಿದ್ದ ನನಗೆ ಚಳಿಯೇ ಬಿಟ್ಟಂತೆ ಆಗಿತ್ತು. ನಾನು ಶಾಲೆಗೆ ಕರೆಯಿಸಿದಾಗ ಈ ಥರ ಕುಣಿಯದಿರುವ ಈ ಯುವಕರು ಇಂದು ಕಣ್ಣು ಬಿಟ್ಟಂತೆ ಬಿಟ್ಟು ಕುಳಿತುಕೊಳ್ಳುವ ಹಾಗೇ ಮಾಡಿದ್ದರು. ನಮ್ಮ ಶಿವಮಲ್ಲಪ್ಪ  ’ಗುರಾಜ್ ಸಾರ್ ನೀವು ಇನ್ನೂ ಮೂರು ದಿನದ ಸವಾಲ್ ಪದಗಳನ್ನು ನೋಡಬೇಕು ಸುತ್ತಲಿನ ಊರಿನವರು ಬಂದು ಹಾಡ್ತಾರೆ ’ ಎಂದು ಅವರೊಂದಿಗೆ ಬಿಸಿ ನೀರಿನ ಚಹಾದಂಥ ದ್ರವವನ್ನು ಹೊಟ್ಟೆಗೆ ಇಳಿಸಿಕೊಂಡು ಬೆಂಕಿಯ ಕೆಂಡವನ್ನು ನೋಡುತ್ತಾ ಊರಿನವರ ತಮಾಶೆಯ ಚೇಡಿಸುವ ಮಾತುಗಳನ್ನು ಆಲಿಸುತ್ತಾ ದೇವರ ಗುಡಿ ಎದುರಿನಲ್ಲಿ ಕುಳಿತೇ ಇದ್ದೆ. ಬೆಳಗಿನ ಸಂಬ್ರಮಕ್ಕೆ ಜನರೆಲ್ಲ ಸಿದ್ಧರಾಗಲು ನಾನು ಮುಖಕ್ಕೆ ನೀರನ್ನು ಬಡಿದು ತಯಾರಾದೆ. ಡೋಲಿಯ ಹೊತ್ತು ತಿರುಗುವ ಹೇಳಿಕೆಯನ್ನು ನೀಡುವುದು ಹೀಗೆ ಪ್ರತಿಯೊಂದನ್ನು ನೋಡುತ್ತಾ ಬೇಡಿಕೊಂಡವರು, ಫಲ ಪಡೆದವರು, ಬೇಡಿಕೊಳ್ಳುವವರು ಹೀಗೆ ಎಲ್ಲ ರೀತಿಯಲ್ಲಿ ಆ ಜಾಗ ತುಂಬಿ ಹೋಗಿತ್ತು. ಕಾಲಿಗೆ ನೀರು ಹಾಕುವುದು ಆಶೀರ್ವಾದ ಪಡೆಯುವುದು ಹೀಗೆ ಪ್ರತಿ ಹಂತದಲ್ಲೂ ಜನರ ಸಂಭ್ರಮ ಅವರ ಬಟ್ಟೆ, ಓಡಾಟ, ಮೊಗದಲ್ಲಿ ಸಂತೋಷಗಳೆಲ್ಲ ಸ್ಪಷ್ಟವಾಗಿ ಕಾಣುತ್ತಿದ್ದವು.


ದುಡಿಯಲಿಕ್ಕೆ ಹೋಗಿ ಮರಳಿ ಬಂದಿದ್ದ ಗೆಳೆಯರೆಲ್ಲ ತಾವು ತಂದಿದ್ದ ಬಾಟಲಿಗಳನ್ನು ಹೊಟ್ಟೆಗೆ ಇಳಸಿ ಬೇರಯದೇ ಆಕಾರ ತಳೆದಿರುವುದನ್ನು ಕಾಣಬಹುದಾಗಿತ್ತು. ಮಕ್ಕಳಲ್ಲಿ ಸಂಭ್ರಮವೇ ಬೇರೆ. ಮಾಲ್ದಿ, ಬಾಡೂಟ ಬೇರೆ ಬೇರೆ ಹಬ್ಬದ ತಿನಿಸುಗಳನ್ನು ತಿಂದು ಹಬ್ಬದಲ್ಲಿ ಬೆರೆತು ಹೋಗಿದ್ದರು. ಕೆಲೆವು ಮಹಿಳೆಯರಿಗೆ ಸಾಕಷ್ಟು ಕೆಲಸಗಳಿದ್ದರೆ ಇನ್ನೂ ಕೆಲವರಿಗೆ ಶೃಂಗಾರದಲ್ಲಿಯೇ ಹಬ್ಬವನ್ನು ಸವಿಯುತ್ತಿದ್ದರು. ಬೇಡಿಕೊಳ್ಳುವಲ್ಲಿ ಯಾರು ಹಿಂದೇಟು ಹಾಕುತ್ತಿರಲಿಲ್ಲ. ಎಲ್ಲರೂ ಹಬ್ಬದಲ್ಲಿ ಭಾಗುವಹಿಸುವಿಕೆ ಇದ್ದದ್ದನ್ನು  ನಾನು ಇಲ್ಲಿ ಕಾಣುತ್ತಿದ್ದೆ.

ಊರಿನ ಕುರಿತು ಹೇಲಿಕೆಯನ್ನು ಕೇಳುವಲ್ಲಿ ಹಿರಿಯರು ಹಾತೊರೆಯುವುದನ್ನು ಇಲ್ಲಿ ಕಾಣುತ್ತಿತ್ತು. ಅದು ಅವರ ಜವಾಬ್ದಾರಿಯು ಆಗಿತ್ತು. ಬರಬಹುದಾದ ಆಪತ್ತು, ಮಾಡಬೇಕಾದ ಕಾರ್ಯಗಳ ಕುರಿತು ಕೇಳಿದ ಹಿರಿಯರು ತೃಪ್ತಿಯ ಹೇಳಿಕೆಯನ್ನು ಪಡೆದು ನಂತರದಲ್ಲಿ ದೇವರನ್ನು ಮುಂದೆ ಸಾಗಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದರು. ಮುಸ್ಲಿಂರಿಗೆ ದುಃಖದ ಹಬ್ಬ ಆದ್ರೆ ಇಡೀ ಊರಲ್ಲಿ ಬೇರೆ ಹಬ್ಬಗಳಿಗೂ ಕೂಡದ ಜನರು ಮೋಹರಂನಲ್ಲಿ ತಪ್ಪದೆ ಸೇರುತ್ತಾರೆ. ಎರಡೆ ಕುಟುಂಬಗಳಿದ್ದ ಮುಸ್ಲಿಂರು ಇಂದು ಕುಟುಂಬ ವಿಂಗಡಣೆಯಿಂದಾಗಿ ಎಂಟು ಮನೆಗಳಾಗಿವೆ. ಆದರೂ ಹಬ್ಬಕ್ಕೆ ಎಲ್ಲೂ ಕುಂದು ಉಂಟಾಗದೇ ನಡೆಯಿಸಿಕೊಂಡು ಬಂದಿದ್ದಾರೆ ಊರಿನ ಹಿರಿಯರು. ನಾಟಕದ ಯೋಜನೆಯಿಂದಾಗಿ ಒಂದು ಹಬ್ಬದ ಪೂರ್ಣ ಹಿನ್ನಲೆಯನ್ನು ಜನರ ಪರಸ್ಪರ ಸೌಹಾರ್ದತೆಯನ್ನು ಕಣ್ಣಾರೆ ಕಾಣುವ ಅವಕಾಶ ಒಬ್ಬ ನಾಟಕಮೇಷ್ಟ್ರ ಆಗಿ ನಾನು ಕಂಡು ಕೊಂಡಿದ್ದೇನೆ. ನಮ್ಮ ವಿದ್ಯಾರ್ಥಿಗಳಿಗೆ, ಊರಿನೆಲ್ಲ ಸಮಸ್ತರಿಗೂ ನಾನು ಋಣಿಯಾಗಿದ್ದೇನೆ. ಮಹಾಂತೇಶ್, ಶಿವಮಲ್ಲಪ್ಪ, ಈರಣ್ಣ ಅಂಗಡಿ, ದತ್ತಾತ್ರೇಯ, ರಾಜಣ್ಣ ವಿಶೇಷವಾಗಿ ಶ್ರೀ ಕನಕರಾಯ ರೆಡ್ಡಿ ಅವರಿಗೆ ಧನ್ಯಾವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ. 

ಶುಕ್ರವಾರ, ನವೆಂಬರ್ 8, 2013

ಮೊಹರಂ



               ಜಾನಪದ ಹಳ್ಳಿಯ ಪ್ರಾಣ. ಅಧುನಿಕ ಶಿಕ್ಷಣವನ್ನು ಚಿಂತನೆಗೆ ಬಿಟ್ಟು ಜನರ  ಉಸಿರಿನೊಡನೆ ಬೆರೆತದ್ದು ಜಾನಪದ. ಆದರೆ ಇಂದು ನಾವು  ತಿಳಿದಂತೆ ಇದೆಯೇ ಎಂದು ಯೋಚಿಸುವಾಗ ಧನಾತ್ಮಕ ಹಾಗೂ ಋಣತ್ಮಕ ಎರಡು ಅಂಶಗಳು ಗೋಚರಿಸುತ್ತವೆ. ನಾನೊಂದು ಸಣ್ಣ ಹಳ್ಳಿಯಲ್ಲಿ ಶಿಕ್ಷಕನಾಗಿ ಕಾರ್ಯ ವಹಿಸುತ್ತಿರುವವ. ಇಂಥಹ ವಿಷಯಗಳು ಜಾಗತಿಕವಾಗಿ ಗಮನಿಸುವುದಕ್ಕಿಂತ ಸಾಮಾನ್ಯನಂತೆ ಕಾಣಲು ಬಯುಸುತ್ತೇನೆ. ಇಲ್ಲಿಯ ಜನರ ನಂಬಿಕೆಯಲ್ಲಿ ಆಧುನಿಕತೆ ಇಲ್ಲಿಯವರೆವಿಗೂ ಎಷ್ಟೇ ವಿಧದಲ್ಲಿ, ಯಾವುದೇ ರೀತಿಯಲ್ಲಿ ಪ್ರವೇಶ ಪಡೆದಿದ್ದರು ಅದು ಹಬ್ಬ ಹಾಗೂ ಆಚರಣೆಗಳಲ್ಲಿ ಎಲ್ಲವನ್ನು ಮೀರಿ ನಿಲ್ಲುತ್ತಿದೆ. ಮುಂದೆ ಬದಲಾವಣೆಗಳು ಕಾಣಬಹುದು, ಆದರೆ ಪ್ರಸ್ತುತವಾಗಿ ನಾವು ಕಾಣುವಾಗ ಸ್ಪಷ್ಟವಾಗಿದೆ. ಮೊಹರಂನ ಈ ದಿನಗಳಲ್ಲಿ ಕಳೆದ ಎರಡು ತಿಂಗಳುಗಳಿಂದ ದಿನವೂ ಬಿಡದೆ ಸಂಘದ ಕೋಣೆಯಲ್ಲಿ ಸೇರಿ ಹೆಜ್ಜೆಕುಣಿತ, ರಿವಾಯಿತ್ ಪದಗಳನ್ನು ಬಿಡದೆ ಅಭ್ಯಾಸ ಮಾಡುತ್ತಿರುವ ಯುವಕರು ಅವರಿಗೆ ಮಾರ್ಗದರ್ಶನ ಮಾಡುತ್ತಿರುವ ಹಿರಿಯರನ್ನು ಕಂಡಾಗ ಮೂಲದ ಕೊಂಡಿಯ ಶಕ್ತಿಯ ಕುರಿತು ಅಶ್ಚಾರ್ಯವಾಗುತ್ತದೆ. 

                                                                                             ಮುಸ್ಲಿಂರ ಆಗಮನದಿಂದ ಅವರ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಚಾರಗಳು ಎಲ್ಲ ರೀತಿಯಲ್ಲಿ ನಮ್ಮ ಜನರೊಟ್ಟಿಗೆ ಬೆರೆತವು. ಇಂದು ಹೇಗಾಗಿದೆಯೆಂದರೇ ಹಸೇನ್ ಹುಸೇನ್ ( ಪೀರ) ನು ಹಾಗೂ ಊರ ದ್ಯಾಮವ್ವ ಅಣ್ಣ ತಂಗಿ ಎಂದು ಮಾತನಾಡುವ ಹಿರಿಯರು ಧರ್ಮಗಳು ಭಿನ್ನ ಎಂದು ನೋಡುವ ಆ ಕುರಿತು ಮಾತನಾಡುವ ಪ್ರಸಂಗವೇ ಉದ್ಭವವಾಗಿಯೇ ಇಲ್ಲ. ಬಿನ್ನ ಸಮುದಾಯದ ಯುವಕರು ಒಂದೆಡೆ ಕಲೆತು ಹೆಜ್ಜೆ ಹಾಕುವ ಈ ಕ್ಷಣಗಳು ಮಧುರವೆಂದು ಹೇಳುತ್ತೇನೆ.

    ನಮ್ಮ ಜಹಗೀರಗುಡದೂರಿನ ಗ್ರಾಮದಿಂದ ಬದುಕಿಗಾಗಿ 
ದೂರದ ಮಂಗಳೂರು,ಉಡುಪಿ, ಬೆಂಗಳೂರು, ಗೋವ ಹೀಗೆ ನಾನಾ ಮಹಾ ನಗರಗಳಿಗೆ ಗುಳೆ ಹೊರಟು ಹೋಗಿ ದುಡಿಯುತ್ತಿರುವ ಹಲವು ಜನರಿದ್ದಾರೆ. ಆದರೆ ನಮ್ಮದೇ ಆಗಿ ಹೋಗಿರುವ ಈ ಮೊಹರಂನ ದಿನಗಳನ್ನು ತಪ್ಪಿಸಿಕೊಳ್ಳದೆ ಅಲಾವಿ ಸುತ್ತಾ ಒಂದು ಬಾರಿ ಹೆಜ್ಜೆ ಹಾಕದಿದ್ದರೆ ಸಮಾಧಾನವಿಲ್ಲ ಎಂದು ಊರಿಗೆ ಮರಳಿ ಬರುತ್ತಿದ್ದ ಯುವಕನ ಮಾತಿನಿಂದ ತಿಳಿದುಕೊಂಡೆ. ಹಬ್ಬದ ಸಂಭ್ರಮದ ಕಾವು ನಿಧಾನವಾಗಿ ಮೇಲೇರುತ್ತಿದೆ. ಮೊಹರಂನ ಕೊನೆಯ ಕತ್ತಲ ರಾತ್ರಿಯ ದಿನ ಹೆಜ್ಜೆಕುಣಿತದ ಆಟವನ್ನು ಸವಿಯಬೇಕು. ಒಬ್ಬ ನಾಟಕ ಶಿಕ್ಷಕನಾಗಿ ಇಂಥಹ ಕ್ಷಣಗಳನ್ನು ಆಸ್ವಾದಿಸುವುದು ಖುಷಿ ಕೊಡುತ್ತದೆ. ಸಂಭ್ರಮದ ಈ ದಿನಗಳನ್ನು ನಾನು ಅವರಂತೆಯೇ ಬದಕಲು ಇಚ್ಚಿಸುತ್ತೇನೆ.
                       


ಬುಧವಾರ, ನವೆಂಬರ್ 6, 2013

ಗ್ರಂಥಾಲಯ

ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುವದರಲ್ಲಿ ಓದುಗನ ಮನಸ್ಸು ಪಕ್ಷಿಯಂತೆ ಸ್ವತಂತ್ರ ಉಡ್ಡಾಣದಲ್ಲಿ ಹಾರತಿರುತ್ತದೆ. ಗ್ರಂಥಾಲಯದಲ್ಲಿ ಓದುವ ಜನರು ಸಹಸ್ರಾರು ವಿಚಾರಗಳನ್ನು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಸಾಮಾರ್ಥ್ಯವನ್ನು ಹೊಂದಿರುತ್ತಾರೆ. ಓದುಗರ ಪ್ರತಿಭೆಯನ್ನು ಉದ್ಧೀಪನಗೊಳಿಸಿ ಸಾಮರ್ಥ್ಯವನ್ನು ಹೆಚ್ಚಿಸುತ್ತಾ, ಪುಸ್ತಕಗಳು ಜ್ಞಾನವನ್ನು ಹಂಚುತ್ತವೆ. ಪುಸ್ತಕದಲ್ಲಿ ಲೀನನಾಗುವ ಮನುಷ್ಯನಿಗೆ ಸಂಪೂರ್ಣವಾದ ಅವಕಾಶವನ್ನು ಗ್ರಂಥಾಲಯ ನೀಡುತ್ತದೆ. ಪುಸ್ತಕಗಳಿಲ್ಲದ ಮನೆ, ಗ್ರಂಥಾಲಯವಿಲ್ಲದ ಶಾಲೆ - ಕಾಲೇಜು,
ದೇವರಿಲ್ಲದ ಗುಡಿಯೆಂದು ಒಬ್ಬರು ವರ್ಣಿಸುತ್ತಾರೆ. ಪುಸ್ತಕದ ಉತ್ತಮ ಅಂಶಗಳ ಕುರಿತು ಎಲ್ಲರೂ ಸದಾ ಮಾತನಾಡುವಂತೆ ಆಗಬೇಕು. ಪುಸ್ತಕದಲ್ಲಿರುವ ಜ್ಞಾನ ಎಲ್ಲರಲ್ಲೂ ಬೆಳಕಿನಂತೆ ಹರಡಬೇಕು. ಪ್ರತಿದಿನ ಹೊಸ ಪುಸ್ತಕಗಳು ಹೊರಬರುತ್ತಲೇ ಇರುತ್ತವೆ. ಕೊಂಡು ಓದುಲು ಸಾಧ್ಯಾವಾಗದೆ ಇದ್ದಾಗ ನಾವು ಗ್ರಂಥಾಲಯದ ಸದ್ಬಳಕೆ ಸಂಪೂರ್ಣವಾಗಿ ಮಾಡಿಕೊಳ್ಳಬೇಕು. ನಾಗರಿಕತೆ, ಸಂಸ್ಕೃತಿ, ವಿಜ್ಞಾನ, ಭಕ್ತಿ, ಕಥೆ-ಕವನ, ಕಾವ್ಯ, ವಿಮರ್ಶೆ ಹೀಗೆ ನಾನಾ ತರಹದ ವಿಚಾರಗಳು ನಮ್ಮೊಳಗೆ ಹೊಯ್ದಾಡುತ, ಜ್ಞಾನ ವೃದ್ಧಿಯಾಗಲು ಸಾಧ್ಯ. 

               ಅದೇ ರೀತಿ ನಮ್ಮ ಊರು, ಬದುಕು, ಜೀವನ ದಿನನಿತ್ಯದ ಘಟನೆಗಳನ್ನು  ಇಟ್ಟುಕೊಂಡು ಹೊಸತನದ ಪುಸ್ತಕ ರಚಿಸುವಂಥ ವಾತವರಣ ನಾವು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾಗಿದೆ. ನಾವು ನಮ್ಮದೇ ಪುಸ್ತಕವನ್ನು ಹೊರ ತರುವಲ್ಲಿ ಪ್ರಯತ್ನ ಮಾಡುತ್ತೇವೆ. 

ರವಿಕುಮಾರ ಬಾಳಪ್ಪ ಮುಶಿಗೇರಿ 
೧೦ ನೇ ತರಗತಿ